ನವದೆಹಲಿ: ಬಾಹ್ಯಾಕಾಶವು ಸುರಕ್ಷಿತ, ಶಾಂತಿಯುತ ಮತ್ತು ಸುಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರಗಳು ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರಕ್ಕೆ ಮುಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪ್ಯಾರಿಸ್ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಚಟುವಟಿಕೆಗಳು ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಮಾನವೀಯತೆ **‘ಘರ್ಷಣೆಗಿಂತ ಸಹಕಾರ’**ವನ್ನು ಆಯ್ಕೆ ಮಾಡಬೇಕು ಎಂದರು. ಶೃಂಗಸಭೆ ಆಯೋಜಿಸಿದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಭಾರತವನ್ನು ಆಹ್ವಾನಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಬಾಹ್ಯಾಕಾಶ ತಂತ್ರಜ್ಞಾನವು ವೈಜ್ಞಾನಿಕ ಸಂಶೋಧನೆಗೆ ಮಾತ್ರ ಸೀಮಿತವಾಗಿಲ್ಲ. ಹವಾಮಾನ ಮುನ್ಸೂಚನೆ, ಕೃಷಿ, ಸಾಗರ ಅಧ್ಯಯನ, ಸಂಚರಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಅದರ ಬಳಕೆ ಹೆಚ್ಚಾಗಿದೆ ಎಂದು ಮೋದಿ ಹೇಳಿದರು.
ಬಾಹ್ಯಾಕಾಶ ಹೆಚ್ಚು ಜನದಟ್ಟಣೆಯಾಗುತ್ತಿರುವ ಹಿನ್ನೆಲೆಯಲ್ಲಿ ದೀರ್ಘಾವಧಿಯ ಸುಸ್ಥಿರತೆಯನ್ನು ಖಚಿತಪಡಿಸಲು ಜಾಗತಿಕ ನಿಯಮಗಳು ಮತ್ತು ಪಾಲುದಾರಿಕೆ ಅಗತ್ಯವಿದೆ. ಅಲ್ಪಾವಧಿಯ ಲಾಭಕ್ಕಿಂತ ಸುಸ್ಥಿರತೆ, ಹೊರಗಿಡುವಿಕೆಯ ಬದಲು ಸೇರ್ಪಡೆಗೆ ಆದ್ಯತೆ ನೀಡಬೇಕು ಎಂದರು.

‘ವಸುಧೈವ ಕುಟುಂಬಕಂ’ ಹಾಗೂ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ದ ತತ್ವಕ್ಕೆ ಅನುಗುಣವಾಗಿ ಅಂತರರಾಷ್ಟ್ರೀಯ ಕಾನೂನು, ಸಂವಾದ ಮತ್ತು ಬಹುಪಕ್ಷೀಯ ಸಹಕಾರ ಆಧಾರಿತ ಬಾಹ್ಯಾಕಾಶ ವ್ಯವಸ್ಥೆಯನ್ನು ಭಾರತ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಹವಾಮಾನ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ ಮತ್ತು ಸಂಚರಣೆ ಕ್ಷೇತ್ರಗಳಲ್ಲಿ ಇಸ್ರೋ ನೀಡುತ್ತಿರುವ ಕೊಡುಗೆಯನ್ನು ಮೋದಿ ಪ್ರಸ್ತಾಪಿಸಿದರು. ಉಪಗ್ರಹ ಆಧಾರಿತ ಸೇವೆಗಳು ರೈತರು, ಮೀನುಗಾರರು ಸೇರಿದಂತೆ ವಿವಿಧ ಸಮುದಾಯಗಳಿಗೆ ನೇರ ಪ್ರಯೋಜನ ನೀಡುತ್ತಿವೆ ಎಂದರು.
ಭಾರತೀಯ ರಾಕೆಟ್ಗಳ ಮೂಲಕ 34 ದೇಶಗಳ 430ಕ್ಕೂ ಹೆಚ್ಚು ಪೇಲೋಡ್ಗಳನ್ನು ಉಡಾಯಿಸಿರುವುದನ್ನು ಉಲ್ಲೇಖಿಸಿದ ಅವರು, ಆದಿತ್ಯ-ಎಲ್1, ಚಂದ್ರಯಾನ-3 ಹಾಗೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಯ ಭೇಟಿ ಸೇರಿದಂತೆ ಭಾರತದ ಸಾಧನೆಗಳನ್ನು ವಿವರಿಸಿದರು.
2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಹಾಗೂ 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನಿಗೆ ಕಳುಹಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ಹೇಳಿದರು.
ದೇಶದ ಖಾಸಗಿ ಬಾಹ್ಯಾಕಾಶ ವಲಯವೂ ವೇಗವಾಗಿ ಬೆಳೆಯುತ್ತಿದ್ದು, ನವೋದ್ಯಮಗಳು ಇಸ್ರೋ ಸೇರಿದಂತೆ ಸ್ಥಾಪಿತ ಸಂಸ್ಥೆಗಳೊಂದಿಗೆ ಸಹಕರಿಸುತ್ತಿವೆ ಎಂದರು.
ಭಾರತ–ಫ್ರಾನ್ಸ್ ಬಾಹ್ಯಾಕಾಶ ಸಹಕಾರದ ದೀರ್ಘ ಇತಿಹಾಸವನ್ನು ಸ್ಮರಿಸಿದ ಮೋದಿ, ಭಾರತದ ಮುಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳು ಪಾಲ್ಗೊಳ್ಳುವಂತೆ ಆಹ್ವಾನಿಸಿದರು.
ಶೃಂಗಸಭೆಯನ್ನು ಸಾಮೂಹಿಕ ಕಾರ್ಯಾಚರಣೆಗೆ ವೇದಿಕೆಯನ್ನಾಗಿ ಮಾಡಬೇಕು. ಭವಿಷ್ಯದ ಪೀಳಿಗೆಗಾಗಿ ಎಲ್ಲರೂ ಒಟ್ಟಾಗಿ ಬಾಹ್ಯಾಕಾಶವನ್ನು ಅನ್ವೇಷಿಸಿ, ನಾವೀನ್ಯತೆ ಸಾಧಿಸಿ ಮತ್ತು ರಕ್ಷಿಸಬೇಕು ಎಂದು ಮೋದಿ ಕರೆ ನೀಡಿದರು.
