ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಹೊರಡಿಸಿದೆ. ಯೋಜನೆಗಾಗಿ ಬಿಡದಿ ಹೋಬಳಿಯ ಮೂರು ಗ್ರಾಮಗಳ ಒಟ್ಟು 2,550 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆದೇಶಿಸಿದೆ.
ಅಧಿಸೂಚನೆಯ ಪ್ರಕಾರ ಕೆಜಿ ಗೊಲ್ಲರಪಾಳ್ಯದಲ್ಲಿ 315 ಎಕರೆ, ಬನ್ನಿಗಿರಿ ಗ್ರಾಮದಲ್ಲಿ 775 ಎಕರೆ 6 ಗುಂಟೆ ಹಾಗೂ ಅರಳಾಳುಸಂದ್ರದಲ್ಲಿ 1,460 ಎಕರೆ 21 ಗುಂಟೆ ಭೂಮಿ ಸ್ವಾಧೀನಕ್ಕೆ ಒಳಪಡಲಿದೆ.
ಈ ನಡುವೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬಿಡದಿ ಟೌನ್ಶಿಪ್ ನನ್ನ ಕನಸಿನ ಯೋಜನೆಯಲ್ಲ. ಈ ಯೋಜನೆಗೆ ನಾನು ಪಿತಾಮಹನಾಗಲು ಬಯಸುವುದಿಲ್ಲ. ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳುವುದಿಲ್ಲ. ರೈತರು ಸ್ವಇಚ್ಛೆಯಿಂದ ಭೂಮಿ ನೀಡಿದರೆ ಮಾತ್ರ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಜಮೀನು ನೀಡುವಂತೆ ಯಾರ ಮೇಲೂ ಒತ್ತಡ ಹೇರಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಈ ಹಿಂದೆ ಕೂಡ ಭೂಸ್ವಾಧೀನ ನಡೆದಿದ್ದು, ಬಿಡದಿ ಟೌನ್ಶಿಪ್ ಯೋಜನೆಯ ಮೂಲ ರೂಪುರೇಷೆಗಳು ಹಿಂದಿನ ಸರ್ಕಾರಗಳ ಅವಧಿಯಲ್ಲೇ ಸಿದ್ಧವಾಗಿದ್ದವು ಎಂದು ಅವರು ಹೇಳಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪನಗರಗಳ ಅಭಿವೃದ್ಧಿ ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಯೋಜನೆ ಕೈಬಿಡುವಂತೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, “ದೇವೇಗೌಡರ ಪತ್ರವನ್ನು ಗಮನಿಸಿದ್ದೇನೆ. ಬಿಡದಿಯಲ್ಲಿ ನಡೆದ ಘಟನೆ ನೋವುಂಟು ಮಾಡಿದೆ. ರೈತರನ್ನು ತಪ್ಪು ದಾರಿಗೆ ಎಳೆಯುವ ರಾಜಕೀಯ ಸಂಚು ನಡೆಯುತ್ತಿದೆ. ಈ ಯೋಜನೆಗೆ ನಾನು ಅಡಿಪಾಯ ಹಾಕಿಲ್ಲ” ಎಂದು ಹೇಳಿದರು.
ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ತೀವ್ರಗೊಂಡಿದ್ದು, ಭೂಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದ ಘಟನೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
