ನವದೆಹಲಿ: ವ್ಯವಹಾರ ಸುಗಮಗೊಳಿಸುವಿಕೆ ಮತ್ತು ನಂಬಿಕೆ ಆಧಾರಿತ ಆಡಳಿತಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರಡಿ ‘ಸುಧಾರಣಾ ಸೂಚನೆ’ (Improvement Notice) ವ್ಯವಸ್ಥೆಯನ್ನು ಪರಿಚಯಿಸಿದೆ.
ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ-2026ರ ಮೂಲಕ ಜಾರಿಗೊಂಡಿರುವ ಈ ವ್ಯವಸ್ಥೆಯಡಿ, ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡುವ ವ್ಯವಹಾರ ಸಂಸ್ಥೆಗಳಿಗೆ ದಂಡಾತ್ಮಕ ಕ್ರಮ ಕೈಗೊಳ್ಳುವ ಮುನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ತಯಾರಕರು, ಆಮದುದಾರರು, ಪ್ಯಾಕರ್ಗಳು, ಡೀಲರ್ಗಳು, ರಿಪೇರಿ ಮಾಡುವವರು, ವ್ಯಾಪಾರಿಗಳು ಹಾಗೂ ಎಂಎಸ್ಎಂಇ ಸೇರಿದಂತೆ ವಿವಿಧ ಘಟಕಗಳಿಗೆ ಈ ವ್ಯವಸ್ಥೆ ಅನ್ವಯವಾಗಲಿದೆ. ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಉಲ್ಲಂಘನೆ ಪತ್ತೆಯಾದಲ್ಲಿ ಸುಧಾರಣಾ ಸೂಚನೆ ನೀಡಲಿದ್ದು, ನಿಗದಿತ ಅವಧಿಯಲ್ಲಿ ದೋಷ ಸರಿಪಡಿಸಿದರೆ ದಂಡದ ಕ್ರಮಗಳಿಂದ ವಿನಾಯಿತಿ ಸಿಗಲಿದೆ.

ನೋಂದಣಿ, ದಾಖಲೆ ನಿರ್ವಹಣೆ, ಮಾದರಿ ಅನುಮೋದನೆ, ತೂಕ ಮತ್ತು ಅಳತೆಗಳ ಉತ್ಪಾದನೆ ಹಾಗೂ ಮಾರಾಟ, ಆಮದು, ಪ್ಯಾಕೇಜ್ ಸರಕುಗಳು ಮತ್ತು ಕಡ್ಡಾಯ ವರದಿ ಸಲ್ಲಿಕೆ ಸಂಬಂಧಿತ ಮೊದಲ ಬಾರಿಗೆ ಸಂಭವಿಸುವ ಉಲ್ಲಂಘನೆಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ.
ಆದರೆ ವಂಚನೆ, ಪುನರಾವರ್ತಿತ ಉಲ್ಲಂಘನೆ ಹಾಗೂ ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುವ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಕ್ರಮವು ಸ್ವಯಂಪ್ರೇರಿತ ಅನುಸರಣೆಗೆ ಉತ್ತೇಜನ ನೀಡುವ ಜೊತೆಗೆ ಅನಗತ್ಯ ನ್ಯಾಯಾಂಗ ವ್ಯಾಜ್ಯಗಳು ಮತ್ತು ಅನುಸರಣಾ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
