ಮುಂಬೈ: ರಾಮಾಯಣದ ಕಥೆಯನ್ನು ಆಧರಿಸಿದ ಮತ್ತೊಂದು ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಸಿಂಗ್ ನಿರ್ದೇಶನದ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸೆಪ್ಟೆಂಬರ್ 25ರಂದು ಹಿಂದಿ ಹಾಗೂ ಛತ್ತೀಸ್ಗಢಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದ್ದು, ಸೀತಾ ಅಪಹರಣದಿಂದ ಲಂಕಾ ದಹನದವರೆಗಿನ ಪ್ರಮುಖ ಘಟನೆಗಳ ಝಲಕ್ ನೀಡಿದೆ.
ಟ್ರೇಲರ್ನಲ್ಲಿ ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುವ ದೃಶ್ಯ ಪ್ರಮುಖವಾಗಿ ಮೂಡಿಬಂದಿದೆ. ಚಿನ್ನದ ಜಿಂಕೆಯ ಪ್ರಸಂಗದ ಬಳಿಕ ಸೀತೆಯ ಅಪಹರಣವಾಗುತ್ತದೆ. ವಿಷಯ ತಿಳಿದ ರಾಮ, ಸೀತೆಯ ಹುಡುಕಾಟಕ್ಕೆ ಹೊರಡುತ್ತಾರೆ. ಈ ಸಂದರ್ಭದಲ್ಲಿ ಹನುಮಂತ ಸೀತೆಯನ್ನು ಭೇಟಿಯಾಗುವ ದೃಶ್ಯಗಳೂ ಟ್ರೇಲರ್ನಲ್ಲಿ ಕಾಣಿಸಿಕೊಂಡಿವೆ.
ರಾಮಸೇತು ನಿರ್ಮಾಣ, ಹನುಮಂತನ ಲಂಕಾ ದಹನ ಹಾಗೂ ಸಂಜೀವಿನಿ ಪರ್ವತ ತರುವ ಸಾಹಸ ಸೇರಿದಂತೆ ರಾಮಾಯಣದ ಹಲವು ಪ್ರಮುಖ ಪ್ರಸಂಗಗಳನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ಜಾಗತಿಕ ಮಟ್ಟದ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗುತ್ತಿದೆ. ಇದರ ನಡುವೆ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರ ಸರಳ ನಿರ್ಮಾಣ ಶೈಲಿ ಹಾಗೂ ಪ್ರಾದೇಶಿಕ ಸ್ಪರ್ಶದೊಂದಿಗೆ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.
ಛತ್ತೀಸ್ಗಢದಲ್ಲಿ ಚಿತ್ರಕ್ಕೆ ವಿಶೇಷ ನಿರೀಕ್ಷೆ ಮೂಡಿದೆ. ದೇವ್ ಶರ್ಮಾ ರಾಮನಾಗಿ, ಅಂಜಲಿ ಅರೋರಾ ಸೀತೆಯಾಗಿ ಹಾಗೂ ರಜನೀಶ್ ದುಗ್ಗಲ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೆ.25ರಂದು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ‘ದಿ ಒನ್’ ಚಿತ್ರದ ಜತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’, ರಾಮಾಯಣದ ಭಕ್ತಿಪೂರ್ವಕ ಕಥೆಯನ್ನು ಸರಳವಾಗಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದೆ.
