ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೊಬೈಕ್ ನಾಗರಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿರುವವರನ್ನೇ ಟಾರ್ಗೆಟ್ ಮಾಡುವ ಕಳ್ಳರ ಜಾಲ, ಕ್ಷಣಾರ್ಧದಲ್ಲಿ ಮೊಬೈಲ್ ಕಸಿದು ಪರಾರಿಯಾಗುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇವೆ.
ಈ ನಡುವೆ, ಬೆಂಗಳೂರಿನ ವೈಟ್ಫೀಲ್ಡ್ ವಿಭಾಗದ ಪೊಲೀಸರು ಈ ಮೊಬೈಲ್ ಕಳ್ಳರ ಹಾವಳಿಗೆ ಬ್ರೇಕ್ ಹಾಕಲು ರಚಿಸಿದ ರಣವ್ಯೂಹ ಫಲ ನೀಡಿದೆ. ಮೊಬೈಲ್ ಕಳ್ಳರ ಜಾಲವನ್ನು ಬೇಧಿಸಲೆಂದೇ ರಚನೆಯಾಗಿದ್ದ ವೈಟ್ಫೀಲ್ಡ್ ಉಪ ವಿಭಾಗದ ಉಪ ಪೊಲೀಸ್ ಆಯುಕ್ತೆ ರೀನಾ ಸುವರ್ಣ ಹಾಗೂ ಮಾರತಹಳ್ಳಿ ಉಪವಿಭಾಗದ ಎಸಿಪಿ ಸುಧಾಕರ್ ನೇತೃತ್ವದ ಪೊಲೀಸ್ ತಂಡಗಳು ಕ್ಷಿಪ್ರ ಕಾರ್ಯಾಚರಣೆಗಿಳಿದು ಕಳ್ಳತನವಾಗಿರುವ ಸಾವಿರಕ್ಕೂ ಹೆಚ್ಚು ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿವೆ.

ಪೊಲೀಸ್ ಮೂಲಗಳ ಪ್ರಕಾರ ಸುಮಾರು ₹2.70 ಕೋಟಿ ರೂಪಾಯಿ ಮೌಲ್ಯದ 1,119 ಮೊಬೈಲ್ ಫೋನ್ಗಳನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ.
ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು 187 ಮೊಬೈಲ್ಗಳು ಪತ್ತೆಯಾಗಿದ್ದು, ನಂತರ ಮಾರತ್ತಹಳ್ಳಿ (145), ವೈಟ್ಫೀಲ್ಡ್ (140), ಮಹದೇವಪುರ (132), ವರ್ತೂರು (120), ಕಾಡುಗೋಡಿ (110), ಹೆಚ್.ಎ.ಎಲ್. (110), ಬೆಳ್ಳಂದೂರು (103), ಅವಲಹಳ್ಳಿ (70) ಹಾಗೂ ಸಿಎನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಮೊಬೈಲ್ಗಳು ಪತ್ತೆಯಾಗಿವೆ.

ಮಾರತ್ತಹಳ್ಳಿ ಹಾಗೂ ವೈಟ್ಫೀಲ್ಡ್ ಉಪವಿಭಾಗಗಳ ನೇತೃತ್ವದಲ್ಲಿ ರಚಿಸಲಾದ ಎರಡು ವಿಶೇಷ ತಂಡಗಳು ಸುಮಾರು ಒಂದು ತಿಂಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದವು. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಪತ್ತೆಯಾದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ 15 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ವೈಟ್ಫೀಲ್ಡ್ ಎಸಿಪಿ ರೀನಾ ಸುವರ್ಣ, ಈ ಕಾರ್ಯಾಚರಣೆಯಲ್ಲಿ ಕಳೆದುಹೋದ ಮೊಬೈಲ್ಗಳನ್ನು ಸಿಇಐಆರ್ (CEIR) ಪೋರ್ಟಲ್ ಮೂಲಕ ಪತ್ತೆಹಚ್ಚಿ ಸಾರ್ವಜನಿಕರಿಗೆ ಹಿಂತಿರುಗಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಹೋದ ಕೂಡಲೇ ಸಿಇಐಆರ್ (CEIR) ಪೋರ್ಟಲ್ನಲ್ಲಿ ದೂರು ದಾಖಲಿಸಿದರೆ, ಮೊಬೈಲ್ ಪತ್ತೆಹಚ್ಚಿ ಮರುಸ್ವಾಧೀನಪಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
