‘ಕರಾವಳಿ’ ಟ್ರೇಲರ್ ಬಿಡುಗಡೆ; ಕಂಬಳದ ಕಥೆ ತೆರೆ ಮೇಲೆ

ಬೆಂಗಳೂರು: ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ರಮೇಶ್ ಇಂದಿರ ನಟನೆಯ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಕರಾವಳಿ ಸಂಸ್ಕೃತಿ, ಸಂಪ್ರದಾಯ ಹಾಗೂ ಕಂಬಳ ಕ್ರೀಡೆಯ ವೈಭವವನ್ನು ಪ್ರಮುಖವಾಗಿ ಅನಾವರಣಗೊಳಿಸಲಾಗಿದೆ. ಕರಾವಳಿಯ ಜೀವನಶೈಲಿ ಮತ್ತು ಜನಪದ ಸಂಸ್ಕೃತಿಯನ್ನು ಅದ್ಧೂರಿಯಾಗಿ ತೆರೆ ಮೇಲೆ ಕಟ್ಟಿಕೊಡುವ ಪ್ರಯತ್ನ ಟ್ರೇಲರ್‌ನಲ್ಲಿ ಗೋಚರಿಸುತ್ತದೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ನಟ ರಾಜ್ ಬಿ. ಶೆಟ್ಟಿ, ನಟಿಯರಾದ ಸಂಪದಾ ಮತ್ತು ಸುಷ್ಮಿತಾ, ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದರು. ಆದರೆ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ.

ಚಿತ್ರದ ಕುರಿತು ಮತ್ತೊಂದು ವಿಶೇಷವೆಂದರೆ, ಟ್ರೇಲರ್‌ಗೆ ಪ್ರಜ್ವಲ್ ದೇವರಾಜ್ ಸ್ವತಃ ಡಬ್ಬಿಂಗ್ ಮಾಡಿಲ್ಲ ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆಯೂ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.